ನ್ಯೂಜ್ ಡೆಸ್ಕ್:-ಸತ್ಯದ ದೇವರು ಎಂದೇ ಖ್ಯಾತರಾಗಿರುವ ಆಂಧ್ರದ ಚಿತ್ತೂರು ಜಿಲ್ಲೆಯ ಪುರಾತನವಾದ ಕಾಣಿಪಾಕಂ ಶ್ರೀ ವರಸಿದ್ದಿ ವಿನಾಯಕ ದೇವಾಲಯ ವಾಸ್ತು ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಿದ್ದು ಭಾನುವಾರ ಲೋಕಾರ್ಪಣೆಗೊಂಡಿತು.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಎಂಡೊಮೆಂಟ್ ಇಲಾಖೆಗೆ ಸೇರಿದ ಕಾಣಿಪಾಕಂ ವರಸಿದ್ದಿ ವಿನಾಯಕ ದೇವಸ್ಥಾನವನ್ನು ಧಾನಿಗಳ ನೆರವಿನಿಂದ ಸುಮಾರು 10 ಕೋಟಿ ವೆಚ್ಚದಲ್ಲಿ ಪಲ್ಲವ ಹಾಗು ವಿಜಯನಗರ ಸಾಮ್ರಾಜ್ಯದ ಶೈಲಿಯ ವಾಸ್ತುಶಿಲ್ಪದಂತೆ ಪುನಃ ನಿರ್ಮಾಣಮಾಡಲಾಗಿದ್ದು ಭಾನುವಾರ ಅರ್ಚಕರ ವೈದಿಕ ಮಂತ್ರ ಘೋಷಣೆಗಳ ನಡುವೆ ಚತುರ್ಥವೇದ ಹೋಮ,ಮಹಾ ಪೂರ್ಣಾಹುತಿ ಮತ್ತು ಕಳಸೋದ್ಭವ ಹಾಗು ವಿಮಾನ ಗೋಪುರ ಮತ್ತು ಧ್ವಜಸ್ತಂಭಕ್ಕೆ ಮಹಾಕುಂಭಾಭಿಷೇಕವನ್ನು ಶುಭ ಮುಹೂರ್ತದೊಂದಿಗೆ ನೆರವೇರಿಸಿ ದೇವಾಲಯವನ್ನು ಲೋಕಾರ್ಪಾಣೆ ಮಾಡಲಾಯಿತು.
![](https://www.vcsnewz.com/wp-content/uploads/2022/08/23822.1.jpg)
ಇದೇ ಸಂದರ್ಭದಲ್ಲಿ ದೇವಾಲಯದ ಅಭಿವೃದ್ದಿಗೆ ಪೂರಕವಾಗಿ ಮೂಲಭುತ ಸೌಕರ್ಯಗಳ ಹಲವು ಅಭಿವೃದ್ಧಿ ಕಾರ್ಯಗಳಾದ ₹ 5 ಕೋಟಿ ಮೌಲ್ಯದ ಲಡ್ಡುತಯಾರಿಕೆಗೆ ಅತ್ಯಾಧುನಿಕ ಅಡಿಗೆಮನೆ, ಭಕ್ತರು ಉಳಿದುಕೊಳ್ಳಲು ₹12 ಕೋಟಿ ವೆಚ್ಚದಲ್ಲಿ ವಿನಾಯಕ ಸದನಂ ವಸತಿ ನಿಲಯ, ₹ 9 ಕೋಟಿ ವೆಚ್ಚದಲ್ಲಿ ಬೃಹತ್ ಕಲ್ಯಾಣ ಮಂಟಪಗಳು; ₹20 ಕೋಟಿಯಲ್ಲಿ ಭಕ್ತರು ದರುಶನಕ್ಕೆ ತೆರೆಳಲು ನೂತನ ಸರತಿ ಸಾಲು ಸಂಕೀರ್ಣ, ಹೊಸ ಬಸ್ ನಿಲ್ದಾಣ ಮತ್ತು ₹ 14 ಕೋಟಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಜೊತೆಗೆ 100 ಅಡಿ ರಸ್ತೆ ನಿರ್ಮಾಣ ಮತ್ತು ದೇವಸ್ಥಾನಕ್ಕೆ ಅಗಮಿಸುವ ಭಕ್ತರಿಗೆ ಸ್ವಾಗತ ಕೋರುವ ₹ 4 ಕೋಟಿ ವೆಚ್ಚದ ಸ್ವಾಗತ ಕಮಾನು ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಮಿಳುನಾಡಿನ ವೆಲ್ಲೂರು ಗೋಲ್ಡನ್ ಟೆಂಪುಲ್ ಲಕ್ಷ್ಮಿನಾರಯಣಿ ಅಮ್ಮ ಸ್ವಾಮಿ, ಆಂಧ್ರ ಸರ್ಕಾರದ ಪ್ರಭಾವಿ ಸಚಿವ ಪುಂಗನೂರು ಶಾಸಕ ಪೆದ್ದಿರೆಡ್ಡಿ ರಾಮಚಂದ್ರರೆಡ್ಡಿ, ಪ್ರವಾಸೋದ್ಯಮ ಸಚಿವೆ ಹಾಗು ಚಿತ್ರನಟಿ ಆರ್.ಕೆ. ರೋಜಾ ಉಪ ಮುಖ್ಯಮಂತ್ರಿ ಕೆ.ನಾರಾಯಣಸ್ವಾಮಿ,ಪೂತಲಪಟ್ಟು ಶಾಸಕ ಎಮ್.ಎಸ್.ಬಾಬು, ರಾಜಂಪೇಟ ಲೋಕಸಭಾ ಸದಸ್ಯ ಮಿಥುನ್ ರೆಡ್ಡಿ, ದೇವಾಲಯ ಪುನರ್ ನಿರ್ಮಾಣಕ್ಕೆ ₹10 ಕೋಟಿ ದೇಣಿಗೆ ನೀಡಿದ ಆಂಧ್ರ ಮೂಲದವರಾಗಿ ಅಮೆರಿಕಾದಲ್ಲಿ ನೆಲೆಸಿರುವ ಗಾಯತ್ರಿದೇವಿ ಮತ್ತು ಐಕಾ ರವಿ ಹಾಗು ಜಾನಕಿ ಮತ್ತು ಗುತ್ತಿಕೊಂಡ ಶ್ರೀನಿವಾಸ್ ದಂಪತಿಗಳು ದೇವಾಲಯದ ಪ್ರಧಾನ ಅರ್ಚಕರಾದ ಧರ್ಮೇಶ್ವರಗುರುಕಲ್, ಗಣೇಶ್ ಗುರುಕಲ್,ಬಾಲಸುಬ್ರಮಣ್ಯಂ,ಸೋಮಶೇಖರ್,ಫಣಿಶರ್ಮಾ, ದೇವಾಯದ ಜಾಯಿಂಟ್ ಕಮೀಷನರ್ ಮಾದಾಲ ವೆಂಕಟ ಸುರೇಶ್ ಬಾಬು, ಧರ್ಮದರ್ಶಿ ಮಂಡಳಿ ಅಧ್ಯಕ್ಷ ಅಗರಾಲಮೋಹನ್ ರೆಡ್ಡಿ ಮುಂತಾದವರು ಇದ್ದರು.