ಶ್ರೀನಿವಾಸಪುರ:-ಕೇಂದ್ರ ಸರ್ಕಾರ ಆದಿ ಜಾಂಭವಂತ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಘೋಷಣೆ ಮಾಡುವಂತೆ ಎಂದು ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವರಾಜ್ ಒತ್ತಾಯಿಸಿರುತ್ತಾರೆ.
ಅವರು ಶ್ರೀನಿವಾಸಪುರದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ಶ್ರೀ ಆದಿ ಜಾಂಭವಂತಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆದಿ ಜಾಂಭವಂತ ತಮ್ಮ ಹಿರಿತನ ಹಾಗೂ ಸಮದೃಷ್ಟಿಯಿಂದ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಸ್ಮರಣೆಯಿಂದ ಮಾನವ ಇತಿಹಾಸದ ದರ್ಶನವಾಗುತ್ತದೆ ಎಂದರು.
ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕು. ಸದಾಶಿವ ಆಯೋಗದ ವರದಿಯನ್ನು ತಕ್ಷಣ ಜಾರಿಗೆ ತರಬೇಕು. ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈಗಾಗಲೆ ಅತ್ಯಂತ ಹಿಂದುಳಿದಿರುವ ಈ ಸಮುದಾಯ ಇನ್ನಷ್ಟು ಕಷ್ಟ-ಕೋಟಲೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾಮು ಮಾತನಾಡಿ, ಮಾದಿಗ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಪ್ರೋತ್ಸಾಹ ನೀಡಬೇಕು. ಶಿಕ್ಷಣ ಇಲ್ಲದೆ ಸಂಘಟನೆ ಹಾಗೂ ಹೋರಾಟ ಸಾಧ್ಯವಾಗುವುದಿಲ್ಲ. ಇದನ್ನು ಸಮುದಾಯದ ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.
![](https://www.vcsnewz.com/wp-content/uploads/2021/03/IMG.32.jpg)
ಕಾರ್ಯಕ್ರಮದ ಜವಬ್ದಾರಿ ಹೊತ್ತಿದ್ದ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಅವಲಕುಪ್ಪಶಂಕರ್,ಕೋಲಾರ ಜಿಲ್ಲಾಧ್ಯಕ್ಷ ಚಂದ್ರಪ್ಪ ಸೇರಿದಂತೆ ಸಂಘಟನೆಯ ಮುಖಂಡರಾದ ಆರ್.ಬಿ.ನರಸಿಂಹ, ರಘುನಾಥ, ಸಿ.ಎಂ.ಲಕ್ಷ್ಮಣ್, ನಾಗೇಶ್, ನಾಗರಾಜ್, ಶ್ರೀನಿವಾಸ್, ಮುನಿರಾಜು, ರವೀಂದ್ರ, ರವಿಕುಮಾರ್, ಸುರೇಶ್, ಕೆ.ವೆಂಕಟೇಶ್, ಶಿವಮ್ಮ, ಮಂಜುಳ, ಸರಸ್ವತಮ್ಮ ಇದ್ದರು