ಕೋಲಾರ: ಸರ್ಕಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಕಾರ್ಮಿಕ ಇಲಾಖೆ ವತಿಯಿಂದ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಒತ್ತಾಯಿಸಿದರು.
ಸೋಮವಾರ ಕೋಲಾರದ ಪತ್ರಕರ್ತರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕಾರ್ಮಿಕ ಕಾಯ್ದೆಯಡಿ ನೋಂದಾಯಿಸಲಾಗಿದೆ. ಇದು ಮೂಲತ: ಕಾರ್ಮಿಕ ಸಂಘಟನೆಯಾಗಿದ್ದರೂ ಸಹ ಇದುವರೆಗೂ ಕಾರ್ಮಿಕ ಇಲಾಖೆಯಿಂದ ಯಾವುದೇ ಸೌಕರ್ಯಗಳನ್ನು ಕಾರ್ಯನಿರತ ಪತ್ರಕರ್ತರಿಗೆ ಒದಗಿಸದೇ ಇರುವುದು ವಿಷಾಧಕರ ಎಂದು ಹೇಳಿದರು.
ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಪ್ರಶ್ನಿಸಿದರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸಲಾಗುತ್ತದೆ. ಆದರೆ ವಾರ್ತಾ ಇಲಾಖೆಯು ಕೇವಲ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತ ಸೌಕರ್ಯಗಳನ್ನು ಒದಗಿಸುತ್ತಿದೆ. ಇದರಿಂದ ಬಹುಸಂಖ್ಯಾತ ಕಾರ್ಯನಿರತ ಪತ್ರಕರ್ತರು ಯಾವುದೇ ಸೌಲಭ್ಯಗಳಿಲ್ಲದೆ ವಂಚಿತರಾಗುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಕಾರ್ಮಿಕ ಕಾಯ್ದೆಯಡಿ ನೋಂದಾಯಿಸಿ ಕಾರ್ಯನಿರ್ವಹಿಸುತ್ತಿರುವ ಕೆಯುಡಬ್ಲೂಯಜೆ ಸದಸ್ಯರನ್ನು ಕಾರ್ಮಿಕರೆಂದೇ ಪರಿಗಣಿಸಿ ಕಾರ್ಮಿಕ ಇಲಾಖೆ ಅಥವಾ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.
ಪತ್ರಕರ್ತ ಸಿ.ವಿ.ನಾಗರಾಜ್ ಮಾತನಾಡಿ ಪತ್ರಕರ್ತರು ಕಾರ್ಮಿಕರೇ ಎಂಬ ಪ್ರಶ್ನೆ ಇದೆ. ನಾವೆಲ್ಲಾ ಪತ್ರಿಕಾ ಮನೆಯಲ್ಲಿ ಕೆಲಸ ಮಾಡುವ ಕಾರ್ಯನಿರತ ಪತ್ರಕರ್ತರು. ೧೯೪೭ರ ಕಾಯ್ದೆ, ೧೯೫೫ರ ಕಾಯ್ದೆ ಪ್ರಕಾರ ಪತ್ರಿಕಾ ಕಚೇರಿಯ ಸಹಾಯಕರು, ತಂತ್ರಜ್ಞರು ಕೂಡ ಕಾರ್ಯನಿರತ ಪತ್ರಕರ್ತರು. ಪತ್ರಕರ್ತರಿಂದ ದಿನಕ್ಕೆ ೫ರಿಂದ ೬ ಗಂಟೆ ಮಾಡಿಸಬೇಕು ಎಂಬುದಿದೆ ಎಂದರು.
೨೦೨೦ರ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಉದ್ಯೋಗ ಭದ್ರತೆ ಕಿತ್ತುಕೊಂಡಿದೆ. ನಿರುದ್ಯೋಗ ಸಮಸ್ಯೆ ಹುಟ್ಟು ಹಾಕಿ ಪತ್ರಕರ್ತರ ಉತ್ಸಾಹ ಕುಗ್ಗಿಸಿದೆ. ನಿಷ್ಪಕ್ಷಪಾತ ಕೆಲಸಕ್ಕೆ ಅಡ್ಡಿಪಡಿಸಿದೆ. ಬಹಳಷ್ಟು ಮಂದಿ ಕೆಲಸ ಬಿಡುತ್ತಿದ್ದಾರೆ.ಸ್ವತಂತ್ರವಾಗಿ ಕೆಲಸ ಮಾಡಲು ಹಾಗೆ ಮಾಧ್ಯಮ ಸಂಸ್ಥೆಗಳನ್ನು ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಏರ್ಪಟ್ಟಿದೆ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ತಮ್ಮದೇ ಆದ ಮಂಡಳಿಗಳು ಇದ್ದು ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಪತ್ರಕರ್ತರಿಗೆ ಮಂಡಳಿ ಇದ್ದರೂ ಏನೂ ಕೆಲಸ ಆಗಿಲ್ಲ ನಮ್ಮ ನಿರ್ಲಕ್ಷ್ಯಕ್ಕೆ ನಾವೂ ಕಾರಣ. ನಾವೂ ಪೂರ್ಣಕಾಲಿಕ ಕಾರ್ಮಿಕರು ಎಂಬುದನ್ನು ಸಾಬೀತುಪಡಿಸಬೇಕು. ಬಹಳ ಸಂವೇದನಾಶೀಲರಾಗಿ ಇದ್ದಿದ್ದರೆ ವಾತಾವರಣವೇ ಬೇರೆ ರೀತಿ ಇರುತಿತ್ತು. ತಮ್ಮ ಅನ್ನ ಹುಡುಕಿಕೊಂಡು ಪತ್ರಕರ್ತರು ತಮ್ಮ ದಾರಿ ಕಂಡುಕೊಂಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ ಅವರು ಇದಕ್ಕೆ ಅಭದ್ರತೆ ಕೂಡ ಕಾರಣ. ಅದು ನೈತಿಕವೋ? ಅನೈತಿಕವೋ ಅವರವರ ಮನೋಭಾವಕ್ಕೆ ಬಿಟ್ಟಿದ್ದು ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಕಾರ್ಮಿಕ ದಿನಾಚರಣೆ ಸಂತಸ ತರುವ ಹಬ್ಬ. ೧೯೨೩ರಲ್ಲಿ ಮೊದಲ ಬಾರಿ ಆಚರಿಸಲಾಯಿತು. ಎಲ್ಲಾ ಕಾರ್ಮಿಕರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಎಲ್ಲರೂ ಒಂದೊಂದು ವಿಧದ ಕಾರ್ಮಿಕರು. ಎಲ್ಲರೂ ಒಂದೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕಾರ್ಮಿಕರಿಗೂ ನೂರಾರು ವರ್ಷಗಳ ಇತಿಹಾಸ ಇದೆ. ಇಡೀ ಜಗತ್ತಿನಲ್ಲಿ ಕಂಪನಿ ಮಾಲೀಕರ ಪರವಾದ ಕಾನೂನು ಜಾರಿ ಮಾಡಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಹೇಳಿದರು.ಪತ್ರಕರ್ತರು ಪರಿಪೂರ್ಣ ಕಾರ್ಮಿಕರೇ ಅಥವಾ ಅಸಂಘಟಿತ ಕಾರ್ಮಿಕರೇ ಎಂಬುದು ಗೊತ್ತಿಲ್ಲ. ಪತ್ರಕರ್ತರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕು. ಸಂಘಟಿತ ಹೋರಾಟ ನಡೆಸಿದರೆ ಸರ್ಕಾರದ ಗಮನ ಸೆಳೆಯಬಹುದು. ಕಾರ್ಮಿಕರ ಹಕ್ಕು ಹಾಗೂ ರಕ್ಷಣೆ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಬಿ.ಸುರೇಶ್, ಅಬ್ಬಣಿಶಂಕರ್, ಓಂಕಾರಮೂರ್ತಿ, ವೆಂಕಟೇಶ ಬಾಬಾ, ಎಸ್.ಸೋಮಶೇಖರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಾ.ಮಂಜುನಾಥ್, ಆಸೀಫ್ಪಾಷ, ಎನ್.ಗಂಗಾಧರ, ಗೋಪಿ, ಎಲ್.ಕಿರಣ್, ಸರ್ವಜ್ಞಮೂರ್ತಿ, ಸಿಅಮರೇಶ್ ಉಪಸ್ಥಿತರಿದ್ದರು. ಕೋ.ನಾ.ಪ್ರಭಾಕರ್ ಪ್ರಾರ್ಥಿಸಿ, ಉಪಾಧ್ಯಕ್ಷ ಟೇಕಲ್ ಲಕ್ಷ್ಮೀಶ್ ಸ್ವಾಗತಿಸಿದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Friday, April 24



