ಶ್ರೀನಿವಾಸಪುರ:ಲೋಕ ಕಲ್ಯಾಣಾರ್ಥವಾಗಿ ಕಾರ್ತಿಕ ಮಾಸದ ಅಂಗವಾಗಿ ಶ್ರೀನಿವಾಸಪುರ ಪಟ್ಟಣದ ಪುರಾತನವಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಇದೆ ಮೊದಲ ಬಾರಿಗೆ ಲಕ್ಷದೀಪೋತ್ಸವ ನಡೆಯಲಿದೆ.

ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಇರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ 25ರ ಶನಿವಾರ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನೀರಿಕ್ಷೆ ಇದೆ.
ಶನಿವಾರ ಬೆಳಗ್ಗೆ ಮೂಲದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಪೂಜೆ ನಡೆಯಲಿದ್ದು ರಾತ್ರಿ ಲಕ್ಷ ದೀಪೋತ್ಸವ ಹಾಗೂ ಬಾಣಬಿರುಸುಗಳ ಪ್ರದರ್ಶನ, ನಡುವೆ ದೇವರ ಭವ್ಯ ಮೆರವಣಿಗೆ ಪಟ್ಟಣದಲ್ಲಿ ನಡೆಯಲಿದೆ.
ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಅದ್ದೂರಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು ಭಾಗವಹಿಸಲಿದ್ದು ಡೊಳ್ಳು ಕುಣಿತ, ವೀರಗಾಸೆ, ಗಾರುಡಿ ಗೊಂಬೆಗಳು, ಪೂಜೆ ತಮಟೆ, ಅಣ್ಣಮ್ಮನ ತಮಟೆ ಮತ್ತಿತರ ಕಲಾವಿದರ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ನೀಡಲಿರುವುದಾಗಿ ಕಾರ್ಯಕ್ರಮದ ವ್ಯವಸ್ಥಾಪಕರು ತಿಳಿಸಿದ್ದಾರೆ ಭಕ್ತಾದಿಗಳು ಸಕಾಲದಲ್ಲಿ ಆಗಮಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಸಮಸ್ತ ಭಕ್ತಾದಿಗಳು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಕೋರಲಾಗಿದೆ.
ರಸ್ತೆಗೆ ವಿದ್ಯುತ್ ದೀಪಾಲಂಕಾರ
ಲಕ್ಷದೀಪೋತ್ಸವ ಅಂಗವಾಗಿ ಪಟ್ಟಣಕ್ಕೆ ಶೋಭೆ ತರಲು ವಿಶೇಷವಾಗಿ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ರಸ್ತೆ ವಿದ್ಯುತ್ ದೀಪಗಳಿಂದ ಜಗಮಗಿಸಲಿದೆ.



ಸಾಗರದಿಂದ ಬಂದಿರುವ ಕಾರ್ಮಿಕರು
ಲಕ್ಷದೀಪೋತ್ಸವದ ಹಣತೆ ಇಡಲು ಸಾವಿರಾರು ಸ್ಟ್ಯಾಂಡ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಇದಕ್ಕಾಗಿ ಕರ್ನಾಟಕದ ಸಾಗರದಿಂದ ಆಗಮಿಸಿರುವ ಸುಮಾರು ಹನ್ನೇರಡು ಮಂದಿ ಕಾರ್ಮಿಕರು ಕಳೆದ ಒಂದು ವಾರದಿಂದ ಸ್ಟಾಂಡ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಸ್ಟ್ಯಾಂಡ್ ನಿರ್ಮಿಸಲು ಒಂದು ಲಾರಿ ಲೋಡ್ ಅಡಿಕೆ ಮರದ ಪಿಪ್ಪೆ ತಗಡುಗಳನ್ನು ತರಿಸಲಾಗಿದೆ.



